ಸಂಸ್ಥಾಪಕರು
ಪರಿಚಯ
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಮಧ್ಯಕಣಿವೆಯಲ್ಲಿ ಕನ್ನಡದ ಕಂಪನ್ನು ಸೂಸುತ್ತಿರುವ ಗುರು ಕೃಷ್ಣಮೂರ್ತಿಯವರ ಒಂದು ಕಿರು–ಪರಿಚಯ ಇಂತಿದೆ.
ಕನ್ನಡ ಶಿಕ್ಷಕಿಯೊಬ್ಬರ (ಅಜ್ಜಿ)ಆಶ್ರಯದಲ್ಲಿ, ಕನ್ನಡ ಸ್ನೇಹಿ ವಾತಾವರಣ ತುಂಬಿದ ಮನೆಯಲ್ಲಿ ಬೆಳೆದು ಸಹಜವಾಗಿಯೇ ಕನ್ನಡ ನಡೆ, ನುಡಿ, ಸಾಹಿತ್ಯದಲ್ಲಿ ಒಲವು. ಗ್ರಾಮಾ೦ತರ ಪ್ರದೇಶವಾದ ಮಾಗಡಿಯಲ್ಲಿ ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ, ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಚರ್ಚೆ, ಕಥೆ, ಕವನ ಬರೆಯುವಿಕೆಯ ಮೂಲಕ ಕನ್ನಡ ಸಾಹಿತ್ಯದ ಬಗೆಗಿನ ಅಭಿರುಚಿಯನ್ನು ಮುಂದುವರೆಸಿದರು. ಸುಮಾರು 5 ವರ್ಷಗಳ ಕಾಲ ತಾವು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಗಳ ಮೂಲಕ ಕರ್ನಾಟಕದ ಹಳ್ಳಿಯ ಶಾಲಾ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಕನ್ನಡದಲ್ಲಿ ವಿಜ್ಞಾನವನ್ನು ಬೋಧಿಸಿದ ಹೆಗ್ಗಳಿಕೆ ಇವರದ್ದು.
ಮಾಗಡಿಯ ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದ ಓದನ್ನು ಮುಗಿಸಿದ ಇವರು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮಾಡಿ ಪದವಿಯನ್ನು ಪಡೆದರು. ಡೆಲ್, ಮೈಕ್ರೋಸಾಫ್ಟ್, ಸಿಸ್ಕೋ ಕಂಪೆನಿಗಳಲ್ಲಿ ಕೆಲಸಮಾಡುತ್ತಿದ್ದ ಇವರ ಜೀವನ ನೌಕೆ ಸಿಸ್ಕೋ ಕಂಪೆನಿಯ ಮೂಲಕ ಅಮೆರಿಕೆಯ ವಾಸಕ್ಕೆ ಅಣಿಯಾಯಿತು. ಪರಿಣಾಮ 2015ರಲ್ಲಿ ಕ್ಯಾಲಿಫೋರ್ನಿಯಕ್ಕೆ ವಲಸೆ. ಇಲ್ಲಿ ಕ್ಯಾಲಿಫೋರ್ನಿಯಾಕ್ಕೆ ಬಂದಮೇಲೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲಿ ಬಿಸಿನೆಸ್ ಸ್ಕೂಲ್ ಗಳಲ್ಲಿ ಉನ್ನತ ವ್ಯಾಸಂಗ.
ಅನೇಕ ಕವನ ಹಾಗೂ ಲೇಖನಗಳನ್ನು ಬರೆದಿರುವ ಇವರ “ಅಮ್ಮ” , ” ವೀಣೆ ತಂತಿ ಮಾಡಿ ನುಡಿಸು” , “ಜ್ಞಾನ ವೃಷ್ಟಿಯ ಅನುಗ್ರಹಿಸೋ ದೇವ”, “ಏನಾ ಮಾಡಲೋ ಶಿವನೇ (ತತ್ವ ಪದ)” ಹಾಗೂ ಶಿವಪಂಚಭೂತಾಕ್ಷರಿ ಗೀತೆಗಳು ಧನಿಮುದ್ರಣಗೊಂಡಿವೆ. ಬದರಿ ಪ್ರಸಾದ್, ಶ್ವೇತಾ ದೇವನಹಳ್ಳಿ, ಸಾದ್ವಿನಿ ಕೊಪ್ಪ ಮುಂತಾದ ಕರ್ನಾಟಕದ ಪ್ರಸಿದ್ಧ ಗಾಯಕರು ಇವರು ರಚಿಸಿರುವ ಗೀತೆಗಳನ್ನು ಹಾಡಿದ್ದಾರೆ.
ಅಮೇರಿಕ ದೇಶದಲ್ಲಿನ ಕನ್ನಡ ಕೂಟಗಳ ಕಾರ್ಯಕ್ರಮಗಳ ನಿರ್ಮಾಣ, ನಿರ್ದೇಶನದ ಮೂಲಕ ಕನ್ನಡದ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಜ್ಞಾನ ಪೀಠ ವಿಜೇತರಿಗೆ ನಮನ ಎಂಬ ಸಂಗೀತ ಕಾರ್ಯಕ್ರಮ, ನನ್ನ ಅಜ್ಜಿ ಶಿಕ್ಷಕಿ ಎಂಬ ಮಕ್ಕಳ ನಾಟಕ, ನಿಸ್ಸಾರ್ ನಮನ, ಶ್ರೀಯುತ ಹೆಚ್. ಎಸ್. ವೆಂಕಟೇಶಮೂರ್ತಿ ಅವರ ಸಂದರ್ಶನ ಹಾಗೂ ಖ್ಯಾತ ಗಾಯಕಿ ನಂದಿನಿ ರಾವ್ ಗುಜ್ಜರ್ ಅವರೊಂದಿಗೆ ನಡೆಸಿದ ದಾಸ – ಶರಣ ಸಾಹಿತ್ಯ ದೀಪ ಇವುಗಳು ಶ್ರೀಯುತರು ನಿರ್ದೇಶಿಸಿದ ಕಾರ್ಯಕ್ರಮಗಳಲ್ಲಿ ಒಂದಾಗಿವೆ. ಇವುಗಳಲ್ಲಿ ಹಲವಾರು ಕಾರ್ಯಕ್ರಮಗಳು ಅಮೇರಿಕಾದ ಕನ್ನಡ ಕೂಟಗಳ ಆಗರ (ಅಕ್ಕ) ಹಾಗೂ ನಾವು ವಿಶ್ವ ಕನ್ನಡಿಗರು (ನಾವಿಕ) ವೇದಿಕೆಗಳಲ್ಲಿ ಪ್ರದರ್ಶನಗೊ೦ಡಿವೆ.
ಇಷ್ಟೇ ಅಲ್ಲದೆ ಪುತ್ತೂರು ನರಸಿಂಹ ನಾಯಕ್, ಬಿ. ಕೆ. ಎಸ್. ವರ್ಮ, ಯಶವಂತ ಸರ್ದೇಶಪಾ೦ಡೆ, ಸ್ನೇಹಾ ಕಪ್ಪಣ್ಣ, ಪ್ರಣಯ ರಾಜ ಶ್ರೀನಾಥ್, ಬಿ. ಜಯಶ್ರೀ ಮೊದಲಾದ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರ ಸಂದರ್ಶನಗಳನ್ನು ಕೈಗೊಂಡು ಅವರುಗಳ ಸಾಧನೆಯ ಬಗ್ಗೆ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ತಿಳಿಯಪಡಿಸಿದ್ದಾರೆ.
ಮೂರು ವರ್ಷಗಳ ಕಾಲ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ (ಕೆ.ಕೆ.ಎನ್.ಸಿ) ಪ್ರತಿಷ್ಠಿತ ವಾರ್ಷಿಕ “ಸ್ವರ್ಣಸೇತು” ಸಂಚಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುವ ಹಾಗೂ 2019ರ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ಇವರದಾಗಿತ್ತು.
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಮಧ್ಯಕಣಿವೆಯಲ್ಲಿರುವ ಸ್ಯಾನ್ ಹ್ವಾಕೀನ್ ಕನ್ನಡ ಸಂಘದ 2021-22 ಹಾಗೂ 2022-23 ನೇ ಸಾಲಿನ ಅಧ್ಯಕ್ಷರಾಗಿ ಕನ್ನಡ ಭಾಷಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗಾದಿ ಸಂಭ್ರಮ, ದೀಪಾವಳಿ, ಕನ್ನಡ ರಾಜ್ಯೋತ್ಸವ ಇವೇ ಮೊದಲಾದಂತಹ ಕಾರ್ಯಕ್ರಮಗಳ ಮುಖಾಂತರ ಹೊರನಾಡಿನ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದಾರೆ. “ನಮ್ಮ ಕನ್ನಡ” ಎಂಬ ಶೈಕ್ಷಣಿಕ ಕಾರ್ಯಕ್ರಮದ ನಿರ್ದೇಶಕರಾಗುವ ಮುಖಾಂತರ ಹೊರದೇಶದಲ್ಲೂ ಮಕ್ಕಳು ಮಾತೃಭಾಷೆಯನ್ನು ಕಲಿತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತಮ್ಮ ಅಮೂಲ್ಯ ಯೋಗದಾನವನ್ನು ನೀಡಿದ್ದಾರೆ.
2023 ರಲ್ಲಿ ಟೆಕ್ಸಸ್ ರಾಜ್ಯದ ಆಸ್ಟಿನ್ ನಗರದಲ್ಲಿ ನಡೆದ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ಸಮಿತಿಯ ನೇತೃತ್ವ ವಹಿಸಿ ಡಾ. ಗಜಾನನ ಶರ್ಮ ಅವರ ಸಂದರ್ಶನವನ್ನು ಸಮ್ಮೇಳನದ ವೇದಿಕೆಯಲ್ಲಿ ನಡೆಸಿಕೊಟ್ಟಿದ್ದಾರೆ.
2024 ರಲ್ಲಿ ಮೊತ್ತ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕನ್ನಡ ಒಂದು ಆಯ್ಕೆಯ ವಿಷಯವಾಗುವಂತೆ ಅದಕ್ಕೆ ಬೇಕಾದ ಎಲ್ಲ ರೀತಿಯ ಅನುಮೋದನೆಗಳನ್ನು ಪಡೆದು ” ಕನ್ನಡ ಗುರುಕುಲ” ಎಂಬ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ಉಕ್ತವಾಗಿರುವ ಪಠ್ಯಗಳ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಉಳಿದ ಯೂರೋಪಿಯನ್ ಭಾಷೆಗಳನ್ನು ಅಭ್ಯಾಸಮಾಡಿ ಪಡೆಯಬಹುದಾದ ಅರ್ಹತೆಯನ್ನು ಪಡೆಯುತ್ತಾರೆ.
ಪದಾಂತರಂಗದ ವತಿಯಿಂದ ಇವರು ಪ್ರತಿವರ್ಷ ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುವ ಜಾಗತಿಕ ಮಟ್ಟದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮವು ಅನಿವಾಸಿ ಕನ್ನಡಿಗರಲ್ಲಿ ಬಹಳ ಪ್ರಸಿದ್ಧಿಯಾಗಿದೆ.
ಧ್ವನಿಮುದ್ರಿತ ಗೀತೆಗಳು

ಕವನಗಳು

ಲೇಖನಗಳು
